ಬೆಂಗಳೂರು : ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ರಾಜ್ಯದಲ್ಲಿ ಶೇಕಡಾವಾರು 74.64 ಫಲಿತಾಂಶ ಬಂದಿದೆ. ಕಳೆದ ಬಾರಿ 61.88 ಫಲಿತಾಂಶ ಬಂದಿತ್ತು. ಹಾಗಾಗಿ ಈ ಬಾರಿಯ ಫಲಿತಾಂಶ ಉತ್ತಮವಾಗಿದೆ ಎಂದು ಕೆಎಸ್ ಇಎಬಿ ಅಧ್ಯಕ್ಷ ಡಾ.ರಾಮಚಂದ್ರನ್ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದರು. ರಾಜ್ಯದಲ್ಲಿ ಒಟ್ಟು 61 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು , ಈ ಬಾರಿ ಶೇಕಡಾವಾರು 74.64 ಮಂದಿ ಪಾಸಾಗಿದ್ದಾರೆ ಅಂತ ತಿಳಿಸಿದರು.
ಕಳೆದ ಮಾರ್ಚ್ 09 ರಿಂದ ಮಾರ್ಚ್ 29ರವರೆಗೆ ನಡೆದಿದ್ದ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 3,63,698, ವಿದ್ಯಾರ್ಥಿನಿಯರು 3,62,497 ಸೇರಿ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಹೊಸಬರು 6.29 ಲಕ್ಷ ವಿದ್ಯಾರ್ಥಿಗಳು, ಖಾಸಗಿ 25,847 ವಿದ್ಯಾರ್ಥಿಗಳು, ಪುನರಾವರ್ತಿತ 70,589 ವಿದ್ಯಾರ್ಥಿಗಳು, ಕಲಾ ವಿಭಾಗ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಕಲಾ ಶಾಸ್ತ್ರ ವಿಭಾಗದಲ್ಲಿ 1,34, 876 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಹಾಗಾಗಿ ಅಲ್ಲಿ ಶೇಕಡಾವಾರು 61.22 ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಶೇಕಡಾವಾರು 75.89 ರಷ್ಟು ಫಲಿತಾಂಶ ಬಂದಿದೆ. ಅದೇ ರೀತಿಯಲ್ಲಿ ವಿಜ್ಞಾನ ವಿಬಾಗದಲ್ಲಿ 2,07,087 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡಾವಾರು 85.71 ರಷ್ಟು ಫಲಿತಾಂಶ ಬಂದಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.
ಇನ್ನು ಕಲಾ ವಿಭಾಗದಲ್ಲಿ ರಾಜ್ಯಕ್ಕೆ ರಾಜಧಾನಿ ಬೆಂಗಳೂರಿನ ಜಯನಗರ ಕಾಲೇಜಿನ ತಬಸ್ಸುಮ್ ಒಟ್ಟು 600 ಅಂಕಕ್ಕೆ 593 ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ಅನನ್ಯ 600 ಅಂಕಕ್ಕೆ 600 ಅಂಕ ಪಡೆದು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಕ್ಕೆ 596 ಅಂಕ ಪಡೆದು ಕೌಶಿಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಡಾ.ರಾಮಚಂದ್ರನ್ ಮಾಹಿತಿ ನೀಡಿದರು.
ಫಲಿತಾಂಶ ತಿಳಿದುಕೊಳ್ಳಲು ಇದನ್ನ ಕ್ಲಿಕ್ ಮಾಡಿ….#karresults.nic.in