ಬೆಂಗಳೂರು : ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಪೋಟಿಸಿದ ಆರೋಪದ ಮೇಲೆ ಮಾಜಿ ಸಚಿವ ಹಾಗೂ
ಬೆಂಗಳೂರಿನ ಆರ್ ಆರ್ ನಗರದ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುಣಸಮಾರನಹಳ್ಳಿಯಲ್ಲಿ ಸರ್ಕಾರಿ ಜಮೀನಿಗೆ ಸೇರಿದಂತೆ ಭೂಮಿಯಲ್ಲಿ ಅಕ್ರಮವಾಗಿ ಜಿಲೆಟಿನ್ ಸ್ಪೋಟಿಸಲಾಗಿತ್ತು. ಈ ಕುರಿತು ಹುಣಸಮಾರನಹಳ್ಳಿ ಗ್ರಾಮದ ಜನರು ಅಕ್ರಮ ಜಿಲೆಟಿನ್ ಸ್ಪೋಟ ತಡೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಧರಣಿಗಳು ಹಾಗೂ ಭಾರೀ ಪ್ರತಿಭಟನೆ ಮಾಡಿ ತೀವ್ರವಾಗಿ ವಿರೋಧಿಸಿದ್ದರು.
ಈ ಹಿನ್ನಲೆ ಸ್ಥಳಕ್ಕೆ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ಭೇಟಿ ನೀಡಿ, ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಜಿಲೆಟಿನ್ ಸ್ಪೋಟಗೊಳಿಸಿರುವುದು ಪತ್ತೆಯಾಗಿತ್ತು.
ಹೀಗಾಗಿ ತಹಶೀಲ್ದಾರ್ ಕಳೆದ ಜುಲೈ.10ರಂದು ಬ್ಲಾಸ್ಟಿಂಗ್ ಮಾಡಿದ ಆರೋಪದ ಮೇರೆಗೆ ಶಾಸಕ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಈಗ ಇದೀಗ ಎಫ್ಐಆರ್ ದಾಖಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.