ಕಲ್ಯಾಣ ಕರ್ನಾಟಕದ ರೈತರ ಬೇಡಿಕೆ, ಜಿಲ್ಲಾ ಸಚಿವರುಗಳು ಹಾಗೂ ಶಾಸಕರ ಒತ್ತಡದ ಹಿನ್ನೆಲೆಯಲ್ಲಿ ತುಂಗಾಭದ್ರಾ ಜಲಾಶಯದಿಂದ 5,575 ಕ್ಯೂಸೆಕ್ಸ್ ನೀರು ಹರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ (ಗುರುವಾರ) ಮಾತನಾಡಿದ ಅವರು, ‘ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ಆಣೆಕಟ್ಟೆ ಮೂಲಕ ನೀರು ಹರಿಸಲು ಬಹಳ ಒತ್ತಡ ಬಂದಿದೆ. ಜಿಲ್ಲಾ ಸಚಿವರು, ಶಾಸಕರುಗಳು ನೀರು ಹರಿಸುವಂತೆ ಕೇಳುತ್ತಿದ್ದಾರೆ. ಇಲ್ಲಿ 105 ಟಿಎಂಸಿ ಶೇಖರಣಾ ಸಾಮರ್ಥ್ಯವಿದ್ದು, ಈಗಾಗಲೇ 83 ಟಿಎಂಸಿ ನೀರಿದೆ. ಇದರ ಜತೆಗೆ ಆಂಧ್ರ ಪ್ರದೇಶದ ಪಾಲಿನ ನೀರನ್ನು ಬಿಡಬೇಕಾಗಿದ್ದು, ಒಟ್ಟು 5,575 ಕ್ಯೂಸೆಕ್ಸ್ ನೀರು ಹರಿಸಲು ಅನುಮತಿ ನೀಡಲಾಗಿದೆ. ಆ ಮೂಲಕ ರೈತರ ಬೇಡಿಕೆಗೆ ಸ್ಪಂದಿಸಿದ್ದೇವೆ” ಎಂದು ಡಿಸಿಎಂ ತಿಳಿಸಿದರು.
*ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ತುಂಗಭದ್ರಾ ಸಲಹಾ ಸಮಿತಿ ರಚನೆ*
‘ತುಂಗಭದ್ರಾ ಸಲಹಾ ಸಮಿತಿಗೆ ಸಚಿವ ಶಿವರಾಜ್ ತಂಗಡಗಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಸಲಹಾ ಸಮಿತಿ ಸಭೆ ಮಾಡಲಾಗುವುದು. ರೈತರ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವ, ಯಾವ ಕಾಲಕ್ಕೆ ಎಷ್ಟು ಎಷ್ಟು ನೀರು ಬಿಡಬೇಕು ಎಂಬ ವಿಚಾರದ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.