ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಇರುವಂತ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಮೋಜಣಿ ಸೇವೆ ದೊರೆಯಲಿದೆ. ಈ ಮೂಲಕ ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಗುಡ್ ನ್ಯೂಸ್ ನೀಡಲಾಗಿದೆ.
ಇನ್ಮುಂದೆ ಗ್ರಾಮ ಪಂಚಾಯತಿ ಕಚೇರಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರಗಳ ಮೂಲಕವೂ ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಣಿ ವ್ಯವಸ್ಥೆಯಡಿಯಲ್ಲಿ 11ಇ ನಕ್ಷೆ, ಜಮೀನಿನ ತತ್ಕಾಲ್ ಪೋಡಿಗಾಗಿ ಅರ್ಜಿ, ಭೂ ಪರಿವರ್ತನೆಗಾಗಿ ಅರ್ಜಿ ಮತ್ತು ಹದ್ದುಬಸ್ತಿಗಾಗಿ ಅರ್ಜಿ ಸೇವೆಯನ್ನು ಗ್ರಾಮೀಣ ಜನತೆ ಪಡೆದುಕೊಳ್ಳಲು ಈ ಕೇಂದ್ರದಿಂದ ಸಾಧ್ಯವಾಗುತ್ತದೆ ಎಂದು ತಿಳಿದು ಬಂದಿದೆ.
ಗ್ರಾಮೀಣ ಜನರ ಅನುಕೂಲಕ್ಕಾಗಿ ಸಿಎಂ ಸಿದ್ಧರಾಮಯ್ಯ ಅವರು ನಿನ್ನೆ (ಮಂಗಳವಾರ) ಈ ಸೇವೆಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ಇಲ್ಲಿಯವರೆಗೆ ಗ್ರಾಮೀಣ ಜನರು ಈ ಸರ್ಕಾರಿ ಸೇವೆಯನ್ನು ತಾಲೂಕು ಅಥವಾ ಹೋಬಳಿ ಮಟ್ಟದಲ್ಲೇ ಪಡೆಯಬೇಕಾಗಿತ್ತು. ಇದರಿಂದ ಅಲ್ಲಿ ಜನಸಂದಣಿ ಹಾಗೂ ಕೇಂದ್ರದಲ್ಲಿ ತ್ವರಿತ ಗತಿಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಕಾರಣದಿಂದ ಗ್ರಾಮ ಪಂಚಾಯತಿ ಹಂತದಲ್ಲೇ ಈ ಸೇವೆ ದೊರೆಯುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಂದಾಜು 3.7 ಕೋಟಿ ಜನರು ಅಂದರೆ 78 ಲಕ್ಷ ಕುಟುಂಬಗಳು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ‘ಮೋಜಣಿ ವ್ಯವಸ್ಥೆ’ಯಡಿಯಲ್ಲಿ ವಿವಿಧ ಸೇವೆಗಳನ್ನು ಪಡೆಯುವಲ್ಲಿ ಗ್ರಾಮ ಪಂಚಾಯತಿ ಬಾಪೂಜಿ ಸೇವಾ ಕೇಂದ್ರಗಳು ಮಹತ್ವದ ಪಾತ್ರವನ್ನು ವಹಿಸಲಿವೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ 17 ಸೇವೆಗಳು ಹಾಗೂ ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಇಂಧನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸೇವೆಗಳನ್ನು ಹಾಗೂ ಆಧಾರ್ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.