ಸರ್ಕಾರಿ ಜಾಗದಲ್ಲಿಯೇ ತಹಸೀಲ್ದಾರ್ ಕಚೇರಿ ಕಟ್ಟಿ.
ಬಡವರ ಭೂಮಿ ಸ್ವಾಧೀನ ವಿರೋಧಿಸಿ ಧರಣಿ.
ಕುಕನೂರು : ಸರ್ಕಾರಿ ಕಟ್ಟಡ ಕಟ್ಟಲು ಕೇವಲ ಒಂದು ಎಕರೆ, ಎರಡು ಎಕರೆ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರರ ಜಮೀನು ಮೇಲೇಕೆ ಅಧಿಕಾರಿಗಳ ಕಣ್ಣು ನೀವೇನೇ ಅಭಿವೃದ್ಧಿ ಕೆಲಸ ಮಾಡಬೇಕು, ಸರ್ಕಾರಿ ಕಟ್ಟಡ ಕಟ್ಟಬೇಕು ಅಂದರೆ ಸರ್ಕಾರಿ ಭೂಮಿಯಲ್ಲಿ ಅಥವಾ ಶ್ರೀಮಂತರ ಜಮೀನು ವಶಪಡಿಸಿಕೊಂಡು ಕಟ್ಟಡ ಕಟ್ಟಿ ಎಂದು ಕುಕನೂರು ತಹಸೀಲ್ದಾರ್ ಕಚೇರಿಗೆ ಜಮೀನು ಸ್ವಾಧೀನಕ್ಕೆ ಒಳಪಟ್ಟ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಕುಕನೂರು ಪಟ್ಟಣ ಪಂಚಾಯತ್ ಆವರಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದ ಭೂಮಿ ಕಳೆದುಕೊಂಡ ರೈತರು ಹಿಂದಿನ ಶಾಸಕ ಹಾಲಪ್ಪ ಆಚಾರ್ ಮತ್ತು ಜಿಲ್ಲಾ ಆಡಳಿತದ ವಿರುದ್ದ ದ್ವನಿ ಎತ್ತಿದ್ದಾರೆ.
ತಮಗಿರುವುದು ಎರಡೇ ಎಕರೆ ಜಮೀನು ದಮ್ಮಯ್ಯ ಎಂದರೂ ಹಿಂದಿನ ಶಾಸಕರು ನಮ್ಮ ಜಮೀನನ್ನು ಸರ್ಕಾರಿ ಕಟ್ಟಡಕ್ಕೆ ಸ್ವಾಧೀನಕ್ಕೆ ಮುಂದಾದರು,ಬೇಕಿದ್ದರೆ ಮಾಜಿ ಸಚಿವರು ಸರ್ಕಾರಿ ಕಟ್ಟಡಕ್ಕೆ ತಮ್ಮ ಜಮೀನನ್ನು ಕೊಟ್ಟು ಮಾದರಿಯಾಗಲಿ ಬಡವರ ಜಮೀನು ಬಿಟ್ಟುಬಿಡಿ ಎಂದು ಜಮೀನು ಕಳೆದುಕೊಳ್ಳುವ ಹಂತದಲ್ಲಿರುವ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕುಕನೂರು ತಾಲೂಕು ಆಡಳಿತ ಕಚೇರಿ ನಿರ್ಮಾಣಕ್ಕೆ ಹಿಂದಿನ ಶಾಸಕರ ಅವಧಿಯಲ್ಲಿ ಬಡ ರೈತರ ಜಮೀನು ಗುರುತಿಸಲಾಗಿದೆ, ಆದರೆ ಸಣ್ಣ ಹಿಡುವಳಿ ರೈತರು ತಮ್ಮ ಜಮೀನು ಕೊಡುವುದಿಲ್ಲ, ತಮ್ಮ ಪಾಡಿಗೆ ಉಳಿಮೆ ಮಾಡಿಕೊಂಡಿರಲು ಬಿಟ್ಟು ಬಿಡಿ ಎಂದು ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತಕ್ಕೆ ಅವಲತ್ತು ಕೊಂಡಿದ್ದಾರೆ.
ಧರಣಿಯಲ್ಲಿ ತಾಲೂಕು ಹಮಾಲರ ಸಂಘ, ದಲಿತ ಸಂಘರ್ಷ ಸಮಿತಿ ಭೀಮ್ ಆರ್ಮಿ, ಕುಕನೂರು ವ್ಯಾಪಾರಸ್ಥರ ಸಂಘ ಸೇರಿದಂತೆ ಇತರ ಸಂಘಟನೆಗಳು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದವು.
ಕುಕನೂರು ಪಟ್ಟಣ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯರು, ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗಗನ್ ನೋಟಗಾರ್, ಸಿದ್ದಯ್ಯ ಕಳ್ಳಿಮಠ, ನಿಂಗಪ್ಪ ಗೊರ್ಲೆಕೊಪ್ಪ, ಸಂಗಮೇಶ ಗುತ್ತಿ, ಖಾಸಿಂ ಸಾಬ್ ತಳಕಲ್, ರೆಹಮಾನ್ ಸಾಬ್ ಮಕ್ಕಪ್ಪ ನವರ್, ನೂರ್ ಅಹ್ಮದ್ ಗುಡಿಹಿಂದಲ್, ಈಶಪ್ಪ ಸಬರದ್, ರಸೀದ್ ಸಾಬ್ ಉಮಚಗಿ , ಲಕ್ಷ್ಮವ್ವ ಚೆಂಡೂರು, ಮಾಣಿಕ್ ರಾವ್ ಕುಲಕರ್ಣಿ ಇತರರು ಉಪಸ್ಥಿತರಿದ್ದರು.