42 ವರ್ಷಗಳ ಸುದೀರ್ಘ ಸೇವೆ. ಬೆಣಕಲ್ ಗ್ರಾಮದ ನಿವೃತ್ತ ಯೋಧ ಹಂಚ್ಯಾಳಪ್ಪಗೆ ಅದ್ದೂರಿ ಸ್ವಾಗತ.
ಕುಕನೂರು : ಸುಮಾರು 42 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾಲೂಕಿನ ಬೆಣಕಲ್ ಗ್ರಾಮದ ವೀರ ಯೋಧ ಹಂಚ್ಯಾಳಪ್ಪ ಮುತುಗೂರಪ್ಪ ತಳವಾರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.
ತೆರೆದ ವಾಹನದಲ್ಲಿ ಗ್ರಾಮಸ್ಥರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ನಿವೃತ್ತ ಯೋಧ ಹಂಚ್ಯಾಳಪ್ಪನವರಿಗೆ ಹೃದಯ ಸ್ಪರ್ಶಿ ಸ್ವಾಗತ ಕೋರಿದರು. ಊರಿನ ಮಹಿಳೆಯರು ಕುಟುಂಬಸ್ಥರು ಸೇರಿ ಆರತಿ ಎತ್ತಿ ನಿವೃತ್ತ ಯೋಧನನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಗಡಿ ಭದ್ರತಾ ಪಡೆಯಲ್ಲಿ ಸುಮಾರು .42 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ಮಾತೃ ಭೂಮಿ ಬೆಣಕಲ್ ಗ್ರಾಮಕ್ಕೆ ಮರಳಿದ ಹಂಚ್ಯಾಳಪ್ಪ ಅವರಲ್ಲಿ ಸಂತಸ ಮನೆಮಾಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಯೋಧ ಹಂಚ್ಯಾಳಪ್ಪ ಅವರು, ಜನನಿ, ಜನ್ಮ ಭೂಮಿಯ ಋಣ ತೀರಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ. ಸೇನೆ ಸೇರಿ ದೇಶ ಸೇವೆ ಮಾಡುವುದು ನಿಜಕ್ಕೂ ಪುಣ್ಯದ ಕೆಲಸ. ದೇವರ ದಯೆ, ತಂದೆ ತಾಯಿ, ಗ್ರಾಮಸ್ಥರ ಆಶೀರ್ವಾದಿಂದ 42 ವರ್ಷ ದೇಶ ಸೇವೆ ಸಲ್ಲಿಸಿ ಚಿರಂಜೀವಿಯಾಗಿ ಸ್ವ ಗ್ರಾಮಕ್ಕೆ ಮರಳಿದ್ದು ಹೆಮ್ಮೆ ಎನಿಸುತ್ತಿದೆ ಎಂದು ಯೋಧ ಹಂಚ್ಯಾಳಪ್ಪ ತಳವಾರ್ ಹೇಳಿದರು.
ಈ ಸಂದರ್ಭದಲ್ಲಿ ಹಂಚ್ಯಾಳಪ್ಪ ಕುಟುಂಬದ ಧರ್ಮ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ನಂತರ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾಮದ ವಿವಿಧ ಸಂಘ, ಸಂಸ್ಥೆಯ ಪ್ರಮುಖರು, ಹಿರಿಯ ಮುಖಂಡರಿಂದ ಗ್ರಾಮದ ಕೀರ್ತಿ ಬೆಳಗಿಸಿದ ಯೋಧ ಹಂಚ್ಯಾಳಪ್ಪನವರಿಗೆ ಆತ್ಮೀಯ ಸನ್ಮಾನ ನಡೆಯಿತು.
ಈ ಸಂದರ್ಭದಲ್ಲಿ ಸೈನಿಕರಾದ ಭೀಮಸೆಪ್ಪ ತಳವಾರ್, ದೇವಪ್ಪ ಬೆಣಕಲ್, ಆದೇಶ್ ಕಿನ್ನಾಳ್, ಮುಖಂಡರಾದ ಗವಿಸಿದ್ದಪ್ಪ ಲೇಬಗೇರಿ, ಜಂಭಣ್ಣ ನಡುಲಮನಿ, ಸಂತೋಷ್ ಬನ್ನಿಕೊಪ್ಪ, ಮುತ್ತಣ್ಣ ಹುಂಡಿ, ನಿಂಗಪ್ಪ, ಮುದುಕಣ್ಣ ವಜ್ರಬಂಡಿ, ಗ್ರಾಮ ಪಂಚಾಯತ್ ಸದಸ್ಯ ಶ್ರೀಕಾಂತ್, ಮಲ್ಲಪ್ಪ, ವಿನಾಯಕ್ ಬಳಗೇರಿ, ಗ್ರಾಮದ ಪ್ರಮುಖರು, ಕುಟುಂಬಸ್ಥರು ಉಪಸ್ಥಿತರಿದ್ದರು.