*ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸಂಜೀವಿನಿ ಮಾಸಿಕ ಸಂತೆ*
*ಕನಕಗಿರಿ:* ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಈ ಮಾಸಿಕ ಸಂತೆಯನ್ನು ಆರಂಭಿಸಲು ಸರ್ಕಾರ ಸೂಚಿಸಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ್ ಹೇಳಿದರು.
ಅವರು, ಪಟ್ಟಣದ ವಾರದ ಸಂತೆಯ ಮೈದಾನದಲ್ಲಿ ತಾ.ಪಂ ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆಯನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸಂತೆಯಲ್ಲಿ ಕೆಲವು ಸಂಘಗಳು ಭಾಗವಹಿಸಿವೆ. ಮುಂದಿನ ದಿನಗಳಲ್ಲಿ ಗ್ರಾಮೀಣಾ ಮಟ್ಟದಲ್ಲೂ ಸಂತೆ ಆರಂಭಿಸಲಾಗುವುದು. ಅಲ್ಲಿ ಹೆಚ್ಚಿನ ಸಂಘಗಳಿಗೆ ಅವಕಾಶ ಸಿಗಲಿದೆ. ಮಹಿಳೆಯರು ಆರ್ಥಿಕವಾಗಿ ಮುನ್ನಡೆ ಸಾಧಿಸಲು ಬೇಕಾದ ನೆರವನ್ನೂ ನೀಡಲಾಗುವುದು ಎಂದು ತಿಳಿಸಿದರು.
ಸದರಿ ಮಾಸಿಕ ಸಂತೆಯಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಉತ್ಪನ್ನಗಳಾದ ಸಿಹಿ ತಿನಿಸುಗಳು, ಬಟ್ಟೆ ವ್ಯಾಪಾರ, ಬಳೆ ವ್ಯಾಪಾರ, ಹುಣಸೆ ಹಣ್ಣಿನ ವ್ಯಾಪಾರ, ಖಾರದ ಪುಡಿ ವ್ಯಾಪಾರ, ಕಸೂತಿ ಸೇರಿದಂತೆ ಕರಕುಶಲ ವಸ್ತುಗಳು ಲಭ್ಯವಿದ್ದವು.
ಈ ಸಂದರ್ಭದಲ್ಲಿ ತಾಲೂಕು ಎನ್.ಆರ್.ಎಲ್.ಎಂ ಸಂಯೋಜಕಿ ರೇಣುಕಾ, ತಾ.ಪಂ ವಿಷಯ ನಿರ್ವಾಹಕ ಯಂಕೋಬ, ಐಇಸಿ ಸಂಯೋಜಕ ಶಿವಕುಮಾರ್ ಕೆ, ಪಿಡಿಓ ಯು.ಮಲ್ಲಿಕಾರ್ಜುನ ಸೇರಿದಂತೆ ಸ್ವಸಹಾಯ ಸಂಘದ ಮಹಿಳೆಯರು, ಎಂಬಿಕೆ ಹಾಗೂ ಎಲ್.ಸಿಆರ್.ಪಿ, ಕೃಷಿ-ಪಶು ಸಖಿಯರು ಹಾಜರಿದ್ದರು.