PV ನ್ಯೂಸ್ ಡೆಸ್ಕ್ ಕನಕಗಿರಿ : ದೇಶದ ಅಭಿವೃದ್ಧಿಗೆ ಪ್ರಾಕೃತಿಕ ಸಂಪತ್ತು ಪ್ರಧಾನವಾಗಿದೆ. ಎಲ್ಲರೂ ಮನೆ ಮುಂದೆ ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಿ ಎಂದು ಗ್ರಾ.ಪಂ ಅಧ್ಯಕ್ಷೆ ಕವಿತಾ ಅವರು ಹೇಳಿದರು.
ತಾಲೂಕಿನ ಸುಳೇಕಲ್ ಗ್ರಾ.ಪಂ ವ್ಯಾಪ್ತಿಯ ಕಲಿಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ತಾ.ಪಂ ಕನಕಗಿರಿ ಹಾಗೂ ಗ್ರಾ.ಪಂ ಸಹಯೋಗದಲ್ಲಿ ಗುರುವಾರ ತಾಯಿಯ ಹೆಸರಲ್ಲಿ ಒಂದು ವೃಕ್ಷ (Ek Ped Maa Ke Naam) ಅಭಿಯಾನ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರದ ಮೇಲೆ ಅತಿಯಾದ ದಬ್ಬಾಳಿಕೆಯಿಂದ ಪ್ರಕೃತಿ ಮುನಿಸಿಕೊಳ್ಳುತ್ತಿದೆ. ಹೀಗಾಗಿ ಅನೇಕ ವಿಕೋಪಗಳನ್ನು ಎದುರಿಸುವಂತಾಗಿದೆ. ಪರಿಸರ ರಕ್ಷಣೆ ಮಾಡಿದರಷ್ಟೇ ಸಮೃದ್ಧ ಮಳೆ, ಬೆಳೆ ನಿರೀಕ್ಷಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ನಂತರ ಗ್ರಾ.ಪಂ ಪಿಡಿಓ ಹನುಮಂತಪ್ಪ ಅವರು ಮಾತನಾಡಿ, ಪರಿಸರ ಅಸಮತೋಲನದಿಂದ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಜನ ನಿರಂತರ ತೊಂದರೆ ಅನುಭವಿಸುವಂತಾಗಿದೆ. ಸಮಸ್ಯೆ ನಿವಾರಣೆಗೆ ಸಮೃದ್ಧವಾದ ಕಾಡು ಬೆಳೆಸುವುದು ಅನಿವಾರ್ಯ ಎಂದು ಹೇಳಿದರು.
ಬಳಿಕ ಶಾಲಾ ಆವರಣದಲ್ಲಿ ವಿವಿಧ ಜಾತಿಯ 100 ಕ್ಕೂ ಹೆಚ್ಚು ಸಸಿಗಳನ್ನು ವಿದ್ಯಾರ್ಥಿಗಳು ತಮ್ಮ ತಾಯಿಯ ಹೆಸರಿನಲ್ಲಿ ನೆಟ್ಟು ಪರಿಸರ ಸಂರಕ್ಷಣೆಗೆ ತಾವು ಸದಾ ಸಿದ್ದಾರಾಗಿದ್ಧೇವೆ. ಜೊತೆಗೆ ತಾವು ನೆಟ್ಟ ಸಸಿಗಳ ಪೋಷಣೆಯನ್ನು ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಶಿವಾನಂದ, ಸದಸ್ಯರಾದ ನಾಗರಾಜ, ಯಮನೂರಪ್ಪ, ಲಕ್ಷ್ಮೀ ಬೆಟ್ಟಪ್ಪ ಸೇರಿದಂತೆ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಾದ ಕವಿತಾ ನಾಯಕ, ಮಹಾಂತೇಶ್, ತಾಲೂಕು ಐಇಸಿ ಸಂಯೋಜಕ ಶಿವಕುಮಾರ್ ಕೆ, ಶಾಲೆಯ ಎಸ್.ಡಿಎಂಸಿ ಅಧ್ಯಕ್ಷ ನಾಗಪ್ಪ, ಮುಖ್ಯೋಪಾಧ್ಯಾಯ ಬಸಪ್ಪ ಎನ್ ಕರಾಬದಿನ್ನಿ, ಶಿಕ್ಷಕರಾದ ಜಡಿಯಪ್ಪ, ರಮೇಶ್, ಮಲ್ಲಪ್ಪ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳಾದ ದುರುಗೇಶ್, ಶರಣೇಗೌಡ, ಆನಂದ ಸೇರಿದಂತೆ ಶಾಲಾ ಮಕ್ಕಳು ಹಾಜರಿದ್ದರು.