PV ನ್ಯೂಸ್ ಡೆಸ್ಕ್ – ಬೆಂಗಳೂರು : ರಾಜಧಾನಿಯಲ್ಲಿ ಘೋರ ಘಟನೆಯೊಂದು ನಡೆದು ಹೋಗಿದ್ದು, ಕ್ಷುಲ್ಲಕ ಕಾರಣಗಳಿಂದಾಗಿ ತಾಯಿಯೊಂದಿಗೆ ಜಗಳವಾಡಿದಂತ ಪುತ್ರಿಯೊಬ್ಬಳು, ಸ್ನೇಹಿತನ ಜೊತೆ ಸೇರಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಬೆಚ್ಚಿ ಬೀಳಿಸಿರುವಂತ ಘಟನೆ ನಡೆದಿದೆ.
ನಗರ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ದಿನಗಳ ಹಿಂದೆ ಸ್ನೇಹಿತ ನವನೀತ್ ಜೊತೆಗೆ ಸೇರಿಕೊಂಡು ಜಯಲಕ್ಷ್ಮೀ(46) ಎಂಬಾಕೆಯನ್ನು ಪುತ್ರಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಪೊಲೀಸ್ ಮಾಹಿತಿಯಿಂದ ತಿಳಿದು ಬಂದಿದೆ. ಮೃತ ಜಯಲಕ್ಷ್ಮೀ ಅವರು ದಿನಸಿ ಅಂಗಡಿಯನ್ನು ಇಟ್ಟುಕೊಂಡು ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೀವನ ನಡೆಸುತ್ತಿದ್ದರು. ಅವರೊಂದಿಗೆ ಆಗಾಗ ಪುತ್ರಿ ಜಗಳವಾಡುತ್ತಿದ್ದಳು. 2 ದಿನಗಳ ಹಿಂದೆ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಈ ವೇಳೆ ಸ್ನೇಹಿತನೊಂದಿಗೆ ಸೇರಿಕೊಂಡು ತಾಯಿಯನ್ನೇ ಪುತ್ರಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ತಿಳಿದು ಬಂದಿದೆ.