LOCAL NEWS : ಕಲ್ಬುರ್ಗಿ ಶರಣಬಸವೇಶ್ವರರ ಬದುಕು ಮಾದರಿ- ಮಹಾದೇವ ಶ್ರೀ
ಕುಕನೂರ ನ 23 : ಕಲ್ಬುರ್ಗಿ ಶರಣಬಸವೇಶ್ವರರ ಬದುಕು ಮಾದರಿ, ಅವರು ವಿಭೂತಿ ರುದ್ರಾಕ್ಷಿ, ಪಂಚಾಕ್ಷರಿ ಮಂತ್ರ, ಪಾದೋದಕ ಮತ್ತು ಪ್ರಸಾದವನ್ನ ಜೀವನದ ಅವಿಭಾಜ್ಯ ಅಂಗವಾಗಿಸಿ ಕೊಂಡವರು ಎಂದು ಕುಕನೂರ ತಳಕಲ್ ಅನ್ನದಾನೀಶ್ವರ ಶಾಖಾಮಠದ ಪೂಜ್ಯ ಮಹಾದೇವ ಸ್ವಾಮೀಜಿ ಹೇಳಿದರು.
ಅವರು ಕುಕನೂರ ತಾಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದ ಜಾತ್ರ ಅಂಗವಾಗಿ 11ದಿನಗಳ ಕಾಲ ನಡೆಯುವ ಕಲ್ಬುರ್ಗಿ ಶರಣಬಸವೇಶ್ವರರ ಪುರಾಣ ಉದ್ಘಾಟಿಸಿ ಮಾತನಾಡುತ್ತಾ ಶರಣರ ಪುರಾಣ ರೈತರ ಪುರಾಣವಾಗಿದೆ ಕೃಷಿಯನ್ನು ಕಾಯಕವನ್ನಾಗಿಸಿಕೊಂಡ ಶರಣರು ಕೃಷಿಯಲ್ಲಿ ಪಕ್ಷಿಗಳ ಸಹಭಾಗಿತ್ವ ತಿಳಿಸಿದರು. ಪಕ್ಷಿಗಳನ್ನು ಓಡಿಸುವುದರಿಂದ ಬೆಳೆಗಳು ರೋಗಗ್ರಸ್ತವಾಗಿ ಇಳುವರಿ ಕಡಿಮೆ ಆಗುತ್ತದೆ ಎಂದರಿತು ಹೊಲಕ್ಕೆ ಬರುವ ಪಶುಪಕ್ಷಿಗಳಿಗೆ ಮತ್ತು ಹೊಲದ ಬದಿಯಲ್ಲಿ ಹಾದು ಹೋಗುವ ಜನರಿಗಾಗಿ ಕುಡಿವ ನೀರಿನ ವ್ಯವಸ್ಥೆ ಮಾಡಿದವರು ಇಂತಹ ಶರಣರ ಪುರಾಣ ಕೇಳುವುದರಿಂದ ರೈತರ ಬದುಕು ಸುಂದರವಾಗುತ್ತದೆ ಎಂದರು.
ಪುರಾಣ ಪ್ರವಚನಕಾರರಾದ ಸೊರಟೂರ ಗ್ರಾಮದ ಪೂಜ್ಯ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ ಹಳ್ಳಿಗಳಲ್ಲಿ ಶರಣಬಸವೇಶ್ವರರ ಬಗ್ಗೆ ಅಪಾರವಾದ ಅಭಿಮಾನ ಭಕ್ತಿ ಇದೆ, ಶರಣರು ಎಲ್ಲಾ ವರ್ಗದ ಜನರ ಕಲ್ಯಾಣಕ್ಕೆ ಭೂಮಿಗೆ ಅವತರಿಸಿ ಬಂದವರು, ಈ ನಾಡಿನಲ್ಲಿ ಅತಿ ಹೆಚ್ಚು ಜಾತ್ರೆಗಳನ್ನ ಶರಣರ ಹೆಸರಿನಲ್ಲಿ ಭಕ್ತರು ಮಾಡುತ್ತಾರೆ ಎಂದರು.
ಸಂಗೀತ ಸೇವೆಯನ್ನ ಈಶ್ವರಯ್ಯ ಹಲಸಿನಮಠದ, ಮಲ್ಲಿಕಾರ್ಜುನ ಕರ್ಜಗಿ ಮಾಡಿದರು.
ಈ ಸಂದರ್ಭದಲ್ಲಿ ಶರಣಯ್ಯ ಹಿರೇಮಠ, ಶಿವಕಲ್ಲಯ್ಯ ವಸ್ತ್ರದ, ಬಸಯ್ಯ ಚಂಡೂರು, ಪಕ್ಕಪ್ಪ, ಮುದಿಯಪ್ಪ ಯಗ್ಗಮನವರ, ಹನುಮಂತ ಬಂಗಾರಿ, ಬಸವರಾಜ ಬ್ಯಾಳಿ, ಹಂಚ್ಯಾಲಪ್ಪ ಅಳವಂಡಿ, ರಂಗಪ್ಪ, ತಿರುಗುಣೇಶ ಮೂಗನೂರು, ಶರಣಪ್ಪ, ಮಂಜುನಾಥ, ಮಲ್ಲಯ್ಯಜ್ಜ ಮತ್ತು ಇತರರು ಇದ್ದರು.