ಗಂಗಾವತಿ : ತಾಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಖ್ಯಾತಿ ಹೊಂದಿರುವ ವಡ್ಡರಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ಹಾಗೂ ಯೋಜನೆಗಳ ದುರ್ಬಳಕೆಯಾಗಿದ್ದು, ಈ ಕುರಿತಂತೆ ತನಿಖೆ ನಡೆಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಮಲ್ಲೇಶ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಆಗಷ್ಟೇ 1, 2023ರಂದು ಜಿಲ್ಲಾ ಪಂಚಾಯಿತಿ ಕುಂದು ಕೊರತೆಗಳ ಕಾರ್ಯಾಲಯದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಿರುವ ಮಲ್ಲೇಶ ನಾಯ್ಕ್ ಅವರು ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ಗ್ರಾ.ಪಂ. ಆಯವ್ಯಯ ಮತ್ತು ಲೆಕ್ಕಪತ್ರಗಳ ನಿಯಮಾವಳಗಳ 2006ರ ಕರ್ನಾಟಕ ಆರ್ಥಿಕ ಸಂಹಿತೆ ಕೆ.ಟಿ.ಪಿ.ಪಿ. ನಿಯಮ ಗ್ರಾಮ ಪಂಚಾಯತ್ ಯೋಜನೆಗಳ ಮಾರ್ಗಸೂಚಿ, ಸರಕಾರದ ಸುತ್ತೋಲೆಗಳ ಆದೇಶ ಉಲ್ಲಂಘನೆ, ಅವ್ಯವಹಾರ ನಡೆದಿದ್ದು, 15ನೇ ಹಣಕಾಸು ಮತ್ತು ಗ್ರಾಮ ಪಂಚಾಯಿತಿ ಕರವಸೂಲಿ ಹಣವನ್ನು ವಿದ್ಯುತ್ ಪರಿಕರ, ಕುಡಿಯುವ ನೀರಿನ ಉಪಕರಣಗಳು, ಘನತ್ಯಾಜ ವಿಲೇವಾರಿ ನಿರ್ವಹಣೆ ಇನ್ನಿತರ ನೆಪದಲ್ಲಿ ಖಾಸಗಿ ಅಂಗಡಿಗಳ ಏಜೆನ್ಸಿಯ ನಕಲಿ ಬಿಲ್ಲು ಗಳನ್ನು ತಯಾರಿಸಿ ಲಕ್ಷಾಂತರ ರೂಪಾಯಿ ಎತ್ತುವಳಿ ಮಾಡಲಾಗಿದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲು ಶೇಕಡಾ 25 ಅನುದಾನವನ್ನು ಕೂಡ ದುರ್ಬಳಕೆ ಮಾಡಲಾಗಿದೆ.
ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಗೆ ದೂರು ನೀಡಿ ತಿಂಗಳುಗಳೇ ಕಳೆದಿವೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಾಟಾಚಾರಕ್ಕೆ ಎಂಬಂತೆ ಪತ್ರ ಬರೆದು ಕೈತೊಳೆದುಕೊಂಡಿರುವ ಮೇಲಾಧಿಕಾರಿಗಳು, ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಇನ್ನೂ ಒಂದು ವಾರದ ಒಳಗೆ ಸಂಬಂಧಪಟ್ಟ ಅಧಿಕಾರಿಗಳು ತನಿಖಾ ತಂಡ ರಚಿಸಿ ಮೇಲೆ ಸೂಚಿಸಿದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ. ಕರ್ನಾಟಕದಾದ್ಯಂತ ಸಾರ್ವಜನಿಕರು ಹಾಗೂ ದಲಿತಪರ ಸಂಘಟನೆಗಳ ಜೊತೆಗೂಡಿ ಗ್ರಾಮ ಪಂಚಾಯಿತಿ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಮಲ್ಲೇಶ ನಾಯ್ಕ್ ಎಚ್ಚರಿಸಿದ್ದಾರೆ.